ಪುತ್ತೂರು: ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯು ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಸಂಶೋಧನಾ ಪ್ರವೃತ್ತಿಯನ್ನು ಉತ್ತೇಜಿಸಲು ಹಮ್ಮಿಕೊಂಡಿದ್ದ ಪ್ರತಿಷ್ಠಿತ ‘ಇನ್ಸ್ಪೈರ್ ಅವಾರ್ಡ್’ (MANAK – Inspire Award) ಸ್ಪರ್ಧೆಯಲ್ಲಿ ಇಲ್ಲಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳ ಎರಡು ವಿನೂತನ ವಿಜ್ಞಾನ ಮಾದರಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿವೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ಮಾದರಿಗಳು:

ಅಕ್ಷಯ್ ಗಣೇಶ್ (ಹರ್ಬಲ್ ಪ್ರಿಂಟಿಂಗ್ ಇಂಕ್ ಮಾದರಿ):
ಶ್ರೀ ರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿಯ ಮಾಜಿ ವಿದ್ಯಾರ್ಥಿ (ಪ್ರಸ್ತುತ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ) ಹಾಗೂ ರಘುರಾಮ ಮತ್ತು ವೈಶಾಲಿ ಎಂ. ಆರ್. ದಂಪತಿಯ ಪುತ್ರನಾದ ಅಕ್ಷಯ್ ಗಣೇಶ್ ತಯಾರಿಸಿದ “ಹರ್ಬಲ್ ಪ್ರಿಂಟಿಂಗ್ ಇಂಕ್” (Herbal Printing Ink) ಎಂಬ ಪರಿಸರಸ್ನೇಹಿ ಮಾದರಿಯು ಜಿಲ್ಲಾ ಮಟ್ಟದ ಪ್ರದರ್ಶನಕ್ಕೆ ಅರ್ಹತೆ ಪಡೆದಿದೆ.
ಸಾನಿಕಾ (ಆಟೋಮ್ಯಾಟಿಕ್ ಸ್ಮಾರ್ಟ್ ಕ್ಲೋತ್ ಪ್ರೊಟೆಕ್ಷನ್ ಮಾದರಿ):
ಹರಡಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಮಾಜಿ ವಿದ್ಯಾರ್ಥಿನಿ ಹಾಗೂ ಪ್ರಸ್ತುತ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕೆಮ್ಮಾಯಿ ನಂದಕುಮಾರ್ ಕೆ. ಮತ್ತು ಸುಲೋಚನ ದಂಪತಿಯ ಪುತ್ರಿ ಸಾನಿಕಾ ತಯಾರಿಸಿದ “ಆಟೋಮ್ಯಾಟಿಕ್ ಸ್ಮಾರ್ಟ್ ಕ್ಲೋತ್ ಪ್ರೊಟೆಕ್ಷನ್ ಆಂಡ್ ರೈನ್” (Automatic Smart Cloth Protection and Rain) ಎಂಬ ತಾಂತ್ರಿಕ ಮಾದರಿಯು ಜಿಲ್ಲಾ ಮಟ್ಟಕ್ಕೆ ತೇರ್ಗಡೆಯಾಗಿದೆ.
ಇದನ್ನೂ ಓದಿ: SSLC ತೃತೀಯ ಭಾಷೆಗೆ ಮತ್ತೆ ಗ್ರೇಡ್ ವ್ಯವಸ್ಥೆ ತರಲು ಶಿಕ್ಷಣ ಇಲಾಖೆ ಮುಂದು: ಖಾಸಗಿ ಶಾಲಾ ಒಕ್ಕೂಟಗಳ ತೀವ್ರ ವಿರೋಧ
ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಶ್ರೀ ರಾಮಕೃಷ್ಣ ಶಾಲೆಯ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಗಾಯತ್ರಿ ಎಸ್. ರವರು ಪತ್ರಿಕಾ ಪ್ರಕಟಣೆಯ ಮೂಲಕ ಜಂಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಯುವ ವಿಜ್ಞಾನಿಗಳ ಸಾಧನೆಯು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಅವರು ಶ್ಲಾಘಿಸಿದ್ದಾರೆ.

