ಕಳ್ಳಸಾಗಣೆ : ಮಹಾರಾಷ್ಟ್ರದ ಚಂದ್ರಾಪುರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭ ಕಿಡ್ನಿ ಕಳ್ಳಸಾಗಣೆ ಜಾಲವು ಪತ್ತೆಯಾಗಿದೆ. ಈ ಜಾಡು ದೆಹಲಿ ಮತ್ತು ತಮಿಳುನಾಡಿನಲ್ಲಿ ಉನ್ನತ ಮಟ್ಟದ ವೈದ್ಯಕೀಯ ವೃತ್ತಿಪರರಿಂದ ನಡೆಯುತ್ತಿದೆ ಎಂಬುವುದು ತಿಳಿದುಬಂದಿದೆ. ಅವರಲ್ಲಿ ಇಬ್ಬರನ್ನು ತಿರುಚ್ಚಿಯ ಸ್ಟಾರ್ ಕಿಮ್ಸ್ ಆಸ್ಪತ್ರೆಯ ಡಾ. ರಾಜರತ್ನಂ ಗೋವಿಂದಸ್ವಾಮಿ ಮತ್ತು ದೆಹಲಿಯ ಡಾ. ರವೀಂದರ್ ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಕಿಡ್ನಿ ಪಡೆಯುವವರಿಂದ ಪ್ರತಿ ಕಸಿ ಮಾಡಲು 50 ರಿಂದ 80 ಲಕ್ಷ ರೂ.ವರೆಗೆ ವಸೂಲಿ ಮಾಡುತ್ತಿದ್ದು, ಬಡ ದಾನಿಗಳಿಗೆ 5 ಲಕ್ಷದಿಂದ 8 ಲಕ್ಷ ರೂ. ನೀಡಲಾಗುತಿತ್ತು ಎನ್ನಲಾಗಿದೆ. ಕಿಡ್ನಿ ದಂಧೆಯು ಆಘಾತಕಾರಿ ಹಾಗೂ ಇದು ಅಂತರ್ ರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕಳ್ಳಸಾಗಣೆ ಹಗರಣವಾಗಿದ್ದು, ಕಳೆದ ತಿಂಗಳು ಮೊದಲ ಬಾರಿಗೆ ಬೆಳಕಿಗೆ ಬಂದಿದ್ದು, ಸಾಲದ ಸುಳಿಯಲ್ಲಿ ಸಿಲುಕಿರುವ ರೈತ ರೋಷನ್ ಕುಡೆ ಎಂಬಾತ ತನ್ನ ಕಿಡ್ನಿಯನ್ನು ಕಾಂಬೋಡಿಯಾದಲ್ಲಿ ಲೇವಾದೇವಿದಾರರಿಗೆ (ಹಣವನ್ನು ಸಾಲವಾಗಿ ಕೊಟ್ಟು ಬಡ್ಡಿ ಪಡೆಯುವ ವ್ಯಕ್ತಿಗಳು) ಪಾವತಿಸಲು 8 ಲಕ್ಷ ರೂ.ಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಈ ದಂಧೆಯು ಬಡ ಸಂತ್ರಸ್ತರನ್ನು ಸಣ್ಣ ಮೊತ್ತದ ಆಮಿಷಗಳ ಮೂಲಕ ಶೋಷಿಸಲಾಗುತಿತ್ತು. ಅಕ್ರಮ ಕಸಿಗಳನ್ನು ಭಾರತ ಮತ್ತು ಆಗ್ನೇಯ ಏಷ್ಯಾದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಯಿತು. ಚಂದ್ರಾಪುರದ ಪೊಲೀಸ್ ಅಧೀಕ್ಷಕ ಸುದರ್ಶನ್ ಮುಮ್ಮಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತನಿಖೆಯು ಸ್ಥಳೀಯ ಗಡಿಗಳನ್ನು ಮೀರಿ ಸಾಗಿದೆ ಮತ್ತು ಮೊಬೈಲ್ ದಾಖಲೆಗಳು ಮತ್ತು ತಾಂತ್ರಿಕ ದತ್ತಾಂಶಗಳ ವಿಶ್ಲೇಷಣೆ ಏಜೆಂಟ್ಗಳು, ದಾನಿಗಳು ಮತ್ತು ವಿಶೇಷ ವೈದ್ಯಕೀಯ ವೃತ್ತಿಪರರ ನಡುವಿನ ಸಹಕಾರದ ಸಂಕೀರ್ಣ ಜಾಲವನ್ನು ಮ್ಯಾಪ್ ಮಾಡಿದೆ. ಈ ಕಾನೂನುಬಾಹಿರ ಶಸ್ತ್ರಚಿಕಿತ್ಸೆಗಳಿಗೆ ಇತರ ವೈದ್ಯಕೀಯ ಸೌಲಭ್ಯಗಳನ್ನು ಗುರುತಿಸಲು ಪೊಲೀಸರು ಈಗ ಬ್ಯಾಂಕ್ ಖಾತೆಗಳು ಮತ್ತು ಡಿಜಿಟಲ್ ಹೆಜ್ಜೆಗುರುತುಗಳನ್ನು ಪರಿಶೀಲಿಸುತ್ತಿದ್ದಾರೆ.
ಚಂದ್ರಾಪುರದ ರೈತ ರೋಶನ್ ಕುಡೆ ಅವರು ಸಾಮಾಜಿಕ ಮಾಧ್ಯಮದಲ್ಲಿ “ಕಿಡ್ನಿ ಡೋನರ್ ಕಮ್ಯುನಿಟಿ” ಪುಟವನ್ನು ಸಂಪರ್ಕಿಸಿದ್ದರು ಮತ್ತು ಅಂತಿಮವಾಗಿ ತಮ್ಮ ಕಿಡ್ನಿಯನ್ನು ಮಾರಾಟ ಮಾಡಲು ಕಾಂಬೋಡಿಯಾಕ್ಕೆ ತೆರಳಿದ್ದರು ಎನ್ನಲಾಗಿದೆ. ಮಾನವ ಜೀವ ಉಳಿಸಬೇಕಾದ ವೈದ್ಯರು ಹಣದ ಆಸೆಗೆ ಬಡವರ ಅಂಗಾಂಗಗಳನ್ನು ವ್ಯಾಪಾರ ಮಾಡುವುದೇ ಸಮಾಜದ ನೈತಿಕ ಪತನವನ್ನು ತೋರಿಸುತ್ತದೆ.

