ಮಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ರಫ್ತು ಮಾರುಕಟ್ಟೆಯನ್ನು ಅಸ್ತವ್ಯಸ್ತಗೊಳಿಸಿದೆ. ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಮತ್ತು ಹಡಗುಗಳ ಮೂಲಕ ಸಾಗಾಟವಾಗುತ್ತಿದ್ದ ಮಲ್ಲಿಗೆ ಹೂವು ಹಾಗೂ ಮೀನುಗಳ ರಫ್ತು ಬಹುತೇಕ ಸ್ಥಗಿತಗೊಂಡಿದ್ದು, ಕರಾವಳಿಯ ಆರ್ಥಿಕ ವ್ಯವಸ್ಥೆ ತತ್ತರಿಸಿದೆ.
ಮಂಗಳೂರು ಮತ್ತು ಉಡುಪಿಯಿಂದ ಪ್ರತಿದಿನ 250-300 ಅಟ್ಟೆ ಮಲ್ಲಿಗೆ ಮುಂಬಯಿಗೆ ಸಾಗಾಟವಾಗುತ್ತಿತ್ತು. ಅದರಲ್ಲಿ ಸುಮಾರು 150-200 ಅಟ್ಟೆ ಮಲ್ಲಿಗೆಯನ್ನು ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿತ್ತು. ಯುದ್ಧದ ಕಾರಣದಿಂದಾಗಿ ಈ ಬೇಡಿಕೆ ಈಗ ಸಂಪೂರ್ಣ ಕುಸಿದಿದೆ ಎಂದು ವ್ಯಾಪಾರಿ ವಿನ್ಸೆಂಟ್ ತಿಳಿಸಿದ್ದಾರೆ.

ಕರಾವಳಿಯ ಪ್ರಮುಖ ರಫ್ತು ಪದಾರ್ಥಗಳಾದ ಅಂಜಲ್, ಮಾಂಜಿ, ಸಿಗಡಿ ಮತ್ತು ಬೊಂಡಾಸ್ ಮೀನುಗಳ ಸಾಗಾಟ ನಿಂತುಹೋಗಿದೆ. ಹಡಗು ಮತ್ತು ಕಂಟೈನರ್ಗಳು ಬಾರದ ಕಾರಣ ಮೀನುಗಾರಿಕೆ ಉದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.ಮಂಗಳೂರಿನ ಸಂಯೋಜಿತ ಸರಕು ಟರ್ಮಿನಲ್ 2026ರ ಜನವರಿವರೆಗೆ 12,185 ಟನ್ ಸರಕು ಸಾಗಾಟ ಮಾಡಿ ದಾಖಲೆ ಬರೆದಿತ್ತು. ಆದರೆ ಈಗ ಅಂತಾರಾಷ್ಟ್ರೀಯ ಕಾರ್ಗೋ ಸೇವೆ ಕುಂಠಿತವಾಗಿರುವುದು ರಫ್ತುದಾರರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
ಯುದ್ಧದ ಭೀತಿಯಿಂದಾಗಿ ವಿದೇಶಿ ಹಾಗೂ ಹೊರರಾಜ್ಯದ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ ಎಂದು ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ದಿಲೀಪ್ ಕುಮಾರ್ ಮಾಹಿತಿ ನೀಡಿದ್ದಾರೆ.ದುಬೈ, ಸೌದಿ, ಕತಾರ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದಾರೆ. ಇವರ ದೈನಂದಿನ ಅವಶ್ಯಕತೆಗಳಾದ ತರಕಾರಿ, ಹಣ್ಣುಹಂಪಲು ಮತ್ತು ಸಾಂಸ್ಕೃತಿಕ ಮಹತ್ವದ ಮಲ್ಲಿಗೆ ಪೂರೈಕೆ ಸ್ಥಗಿತಗೊಂಡಿರುವುದು ಅಲ್ಲಿನ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

