ಬಂಟ್ವಾಳ: ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಪರ್ಸ್ನಲ್ಲಿದ್ದ ಸುಮಾರು 6.24 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಾಗೆಕಾನ ಬಲ್ಯ ನಿವಾಸಿ ಕ್ರಿಸ್ತಿನ್ ವೇಗಸ್ ಎಂಬುವವರ ಪರ್ಸ್ ಕಳವಾಗಿದೆ. ಇವರು ತಮ್ಮ ಪತಿಯೊಂದಿಗೆ ಉಜಿರೆಯಲ್ಲಿ ನಡೆದ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ, ವಾಪಸ್ ಮಂಗಳೂರು ಕಡೆಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.

ಕ್ರಿಸ್ತಿನ್ ಅವರು ಬಿ.ಸಿ.ರೋಡ್ನಲ್ಲಿ ಬಸ್ ಇಳಿದು ಪರ್ಸ್ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಪರ್ಸ್ನಲ್ಲಿ ಐದೂವರೆ ಪವನ್ ತೂಕ ಚಿನ್ನದ ಕರಿಮಣಿ ಸರ. ಒಟ್ಟು ಸುಮಾರು 48 ಗ್ರಾಂ ಚಿನ್ನಾಭರಣಗಳು ಇದ್ದವು. ಅಂದಾಜು ಇದರ ಮೌಲ್ಯ 6,24,000 ರೂಪಾಯಿ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಕುಕ್ಕರ್ ಬಾಂಬ್ ಸ್ಫೋಟದ ಉಗ್ರನಿಗೆ ಶಿಕ್ಷೆ: ಮಂಗಳೂರಿನ ಗರಡಿ ಕ್ಷೇತ್ರದಲ್ಲಿ ವಿಎಚ್ಪಿ ವಿಶೇಷ ಪ್ರಾರ್ಥನೆ

ಬಸ್ನಲ್ಲಿ ಅತಿಯಾದ ಜನದಟ್ಟಣೆ ಇರುವುದನ್ನು ಬಳಸಿಕೊಂಡ ಕಳ್ಳರು, ಪರ್ಸ್ ಕಳ್ಳತನ ಮಾಡಿರುವ ಸಂಶಯ ವ್ಯಕ್ತಪಡಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

