ಬಂಟ್ವಾಳ: ಪ್ರಸಿದ್ಧ ಕಾರಿಂಜೇಶ್ವರ ದೇವಾಲಯ ಸಹಿತ ಎರಡು ದೇವಾಲಯಗಳಿಗೆ ಬಡಿದ ಸಿಡಿಲು, ಹಾನಿ

bantwal heavy rain lightning damage Karinja and Mani mahavishnu temples

ಬಂಟ್ವಾಳ: ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಮಧ್ಯಾಹ್ನ ಸುರಿದ ಭಾರಿ ಮಳೆ, ಬಿರುಗಾಳಿ ಹಾಗೂ ತೀವ್ರ ಗುಡುಗು-ಮಿಂಚಿನ ಅಬ್ಬರದಿಂದ ಎರಡು ಪ್ರಮುಖ ದೇವಸ್ಥಾನಗಳು ಹಾಗೂ ಎರಡು ಮನೆಗಳಿಗೆ ಹಾನಿ ಸಂಭವಿಸಿದೆ.

ಮಾಣಿ ನಾಲ್ಕೂರು ಗ್ರಾಮದ ಇಲಿಯೂರುದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಶನಿವಾರ ಸಂಜೆ ಸಿಡಿಲು ಬಡಿದ ಪರಿಣಾಮ ಸುಮಾರು 1 ಕೋಟಿ ಮೌಲ್ಯದ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮಧ್ಯಾಹ್ನ ಸುಮಾರು 4.30ರ ವೇಳೆಗೆ ತಾಲೂಕಿನಾದ್ಯಂತ ಭಾರಿ ಮಳೆ, ಬಿರುಗಾಳಿ ಮತ್ತು ಸಿಡಿಲಿನ ಆರ್ಭಟ ಕಂಡುಬಂದಿತ್ತು. ಈ ವೇಳೆ ದೇವಸ್ಥಾನದ ಗರ್ಭಗುಡಿಯ ಮೇಲ್ಭಾಗದಲ್ಲಿದ್ದ ಕಲ್ಲಿನ ಚಪ್ಪಡಿಗಳು ಸಿಡಿಲಿನ ಹೊಡೆತಕ್ಕೆ ಚೂರಾಗಿ ನೆಲಕ್ಕುರುಳಿವೆ. ಅದೃಷ್ಟವಶಾತ್, ಘಟನೆ ಸಂಭವಿಸಿದ ವೇಳೆ ದೇವಸ್ಥಾನದ ಅರ್ಚಕರು ಹೊರಗಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇತ್ತೀಚೆಗೆ ನೆರವೇರಿತ್ತು. ಆದರೆ ಮಿಂಚಿನ ಹೊಡೆತದಿಂದ ಗರ್ಭಗುಡಿ ಭಾಗಕ್ಕೆ ತೀವ್ರ ಹಾನಿಯಾಗಿದ್ದು, ಮರುನಿರ್ಮಾಣದ ಅಗತ್ಯ ಎದುರಾಗಿದೆ. ಘಟನೆ ತಿಳಿಯುತ್ತಿದ್ದಂತೆ ದೇವಸ್ಥಾನದ ಟ್ರಸ್ಟಿಗಳು, ಭಕ್ತರು ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು, ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಕರ್ನಾಟಕದ ದಕ್ಷಿಣ ಒಳನಾಡಿಗೆ ‘ಯೆಲ್ಲೋ ಅಲರ್ಟ್’: ಮೇ 19 ರವರೆಗೆ ಧಾರಾಕಾರ ಮಳೆ ಮುನ್ಸೂಚನೆ!

 ಕಾರಿಂಜೇಶ್ವರ ದೇವಸ್ಥಾನಕ್ಕೂ ಸಿಡಿಲಾಘಾತ

ಇನ್ನೊಂದು ಘಟನೆಯಲ್ಲಿ, ಕಾವಳಮೂಡೂರು ಗ್ರಾಮದ ಕರಿಂಜದಲ್ಲಿರುವ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೂ ಶನಿವಾರ ಸಂಜೆ ಸಿಡಿಲು ಬಡಿದಿದೆ. ಬೃಹತ್ ಬಂಡೆಯ ಮೇಲಿರುವ ಈ ದೇವಸ್ಥಾನಕ್ಕೆ ಸಂಜೆ ಸುಮಾರು 5 ಗಂಟೆ ವೇಳೆಗೆ ಮಿಂಚು ಬಡಿದಿದೆ ಎಂದು ಹೇಳಲಾಗಿದೆ. ಘಟನೆ ವೇಳೆ ದೇವಸ್ಥಾನದಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಗರ್ಭಗುಡಿಯ ಮೇಲಿನ ಗೋಪುರಕ್ಕೆ ಮಿಂಚು ಬಡಿದಿರುವ ಶಂಕೆ ವ್ಯಕ್ತವಾಗಿದ್ದು, ಹಾನಿಯ ನಿಖರ ಪ್ರಮಾಣದ ಪರಿಶೀಲನೆ ನಡೆಸಲಾಗುತ್ತಿದೆ.

ಮನೆಗಳಿಗೆ ಹಾನಿ, ಧರಾಶಾಹಿಯಾದ ಮರ

ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಶನಿವಾರ ದಿನಪೂರ್ತಿ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ಬಳಿಕ ಮಳೆ ತೀವ್ರಗೊಂಡಿತ್ತು. ಕಾವಳಪಡೂರು ಗ್ರಾಮದ ಮಧ್ವ ಬರ್ಕಟ್ಟೆ ನಿವಾಸಿ ಕವಿತಾ ಸೇಶಪ್ಪ ಪೂಜಾರಿ ಅವರ ಮನೆಗೆ ಹಾಗೂ ಕಡೇಶಿವಾಲಯ ಗ್ರಾಮದ ಅಣ್ಣು ಪೂಜಾರಿ ಅವರ ಮನೆಗೂ ಸಿಡಿಲು ಬಡಿದು ಹಾನಿಯಾಗಿದೆ.

ಇನ್ನೊಂದೆಡೆ, ಪೆರಾಜೆ ಗ್ರಾಮದ ಕೊಂಕಣಪಡವು ನಿವಾಸಿ ಲಲಿತಾ ಅವರ ಹೆಂಚಿನ ಮನೆಯ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಗೊಳಗಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಹಾನಿಯ ಪ್ರಮಾಣದ ಪರಿಶೀಲನೆ ನಡೆಸುತ್ತಿದ್ದು, ತಾಲೂಕಿನಾದ್ಯಂತ ಸಂಭವಿಸಿದ ಒಟ್ಟು ನಷ್ಟದ ಅಂದಾಜು ಕಾರ್ಯ ಮುಂದುವರಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು