ಬೆಳ್ತಂಗಡಿ: ಬೀಗ ಹಾಕಿದ ಮನೆಗೆ ನುಗ್ಗಿದ ಕಳ್ಳರು ಸುಮಾರು 19.32 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾದ ಘಟನೆ ಬಳ್ಳಮಂಜದಲ್ಲಿ ನಡೆದಿದೆ.
ಕೃಷಿಕರೂ ಆಗಿರುವ ಅರ್ಚಕ ಡಿ.ಮುರಳಿ (50) ಅವರು ರಾತ್ರಿ ವೇಳೆ ಮನೆಗೆ ಬೀಗ ಹಾಕಿ ತಮ್ಮ ಮನೆಯವರೊಂದಿಗೆ ಬಳ್ಳಮಂಜದ ಅನಂತೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮದ ನಂತರ ಮನೆಗೆ ಹಿಂದಿರುಗಿದಾಗ ಬೀಗ ಮುರಿದು ಬಾಗಿಲು ತೆರೆದಿರುವುದು ಕಂಡುಬಂದಿದೆ.

ಇದನ್ನೂ ಓದಿಬೆಂಗಳೂರಿಗೆ ಮರಳಿದ ಟೋಯಿಂಗ್ ಬಿಸಿ: 4 ವರ್ಷದ ಬಳಿಕ ಸಂಚಾರ ಪೊಲೀಸರಿಂದ ಮತ್ತೆ ಕಾರ್ಯಾಚರಣೆ!
ಒಳ ಹೋಗಿ ನೋಡಿದಾಗ ಕಳ್ಳರು ಬೆಡ್ರೂಮ್ಗೆ ನುಗ್ಗಿ ಗೋಡ್ರೇಜ್ ಮುರಿದು ಅದರಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಮುರಳಿಯವರು ಪುಂಜಾಲ್ಕಟ್ಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.ಕಳ್ಳರು ಸಾಧನಗಳನ್ನು ಬಳಸಿ ಮುಂಭಾಗದ ಬಾಗಿಲಿನ ಲಾಕ್ ಮುರಿದು ಒಳನುಗ್ಗಿ, ನಂತರ ಗೋಡ್ರೇಜ್ ಒಡೆದು ಕಳ್ಳತನ ನಡೆಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಚಿನ್ನದ ಚೈನ್, ಬಳೆಗಳು, ಉಂಗುರಗಳು, ಕಿವಿಯೋಲೆಗಳು, ಲಾಕೆಟ್ ಸೇರಿದಂತೆ ಸುಮಾರು 136 ಗ್ರಾಂ ಚಿನ್ನಾಭರಣಗಳು ಕಳ್ಳತನವಾಗಿದ್ದು, ಇವುಗಳ ಮೌಲ್ಯ ಸುಮಾರು 13,32,800 ರೂಪಾಯಿಗಳಷ್ಟಿದೆ. ಈ ಚಿನ್ನಾಭರಣಗಳು ಅರ್ಚಕ ಸೇವೆಗಳ ವೇಳೆ ದೊರೆತ ಕಾಣಿಕೆಗಳಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಕೃಷಿಯಿಂದ ಬಂದ 3 ಲಕ್ಷ ರೂಪಾಯಿ ಮತ್ತು ಅರ್ಚಕ ವೃತ್ತಿಯಿಂದ ಬಂದ 3 ಲಕ್ಷ ರೂಪಾಯಿ ಸೇರಿದಂತೆ ಒಟ್ಟು 6 ಲಕ್ಷ ರೂಪಾಯಿ ನಗದು ಕಳ್ಳತನವಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ


