ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಳ್ವೆಕೋಡಿ ಕಡಲತೀರದಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾಗಿದ್ದವರ ಪೈಕಿ ಕೊನೆಯ ಮೃತದೇಹವೂ ಪತ್ತೆಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಇಡೀ ಕರಾವಳಿ ಜಿಲ್ಲೆಯಲ್ಲಿ ಭಾರಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಅಳ್ವೆಕೋಡಿ ಸಮುದ್ರ ತೀರದಲ್ಲಿ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸಲು ತೆರಳಿದ್ದ ಸ್ಥಳೀಯರು ನೀರಿನ ತೀವ್ರ ಅಬ್ಬರ ಮತ್ತು ಆಳ ಅರಿಯದೆ ತುತ್ತಾಗಿದ್ದರು. ಭಾನುವಾರ ನಡೆಸಿದ ತೀವ್ರ ಶೋಧ ಕಾರ್ಯಾಚರಣೆಯಲ್ಲಿ 10 ಜನರ ಮೃತದೇಹಗಳನ್ನು ಪತ್ತೆ ಹಚ್ಚಿ ಹೊರತೆಗೆಯಲಾಗಿತ್ತು. ಆದರೆ, ಮಾದೇವ್ ನಾಯ್ಕ್ ಎಂಬುವವರು ನಾಪತ್ತೆಯಾಗಿದ್ದರು. ಇಂದು (ಮೇ 25) ಬೆಳಿಗ್ಗೆಯಿಂದ ಮುಂದುವರಿದ ಜಂಟಿ ಕಾರ್ಯಾಚರಣೆಯಲ್ಲಿ ಮಾದೇವ್ ಅವರ ಮೃತದೇಹವೂ ಪತ್ತೆಯಾಗಿದೆ. ಘಟನೆಯಲ್ಲಿ ಸಿಲುಕಿದ್ದ ಇಬ್ಬರು ಮಹಿಳೆಯರನ್ನು ಸಕಾಲದಲ್ಲಿ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಇದನ್ನೂ ಓದಿ:2 ಸಾವಿರ ಪಾವತಿಸಿ ಜೈಲಿಗೆ ಹೋಗುವ ಅವಕಾಶ, ಜೈಲೂಟ ಮಾಡಿ, ನಿಯಮ ಪಾಲನೆ ಕಡ್ಡಾಯ
ಸ್ಥಳೀಯ ಪೊಲೀಸರು, ಜಿಲ್ಲಾಡಳಿತ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಕರಾವಳಿಯ ಪ್ರಸಿದ್ಧ ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡವು ಅತ್ಯಂತ ಜಾಗರೂಕತೆಯಿಂದ ಮತ್ತು ಸಾಹಸದಿಂದ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಪತ್ತೆ ಹಚ್ಚಿ ದಂಡೆಗೆ ತಂದಿದ್ದಾರೆ. ಒಂದೇ ಗ್ರಾಮದ ಹಾಗೂ ಆಸುಪಾಸಿನ 11 ಮಂದಿ ಜಲ ಸಮಾಧಿಯಾಗಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


