ಬೆಳ್ತಂಗಡಿ: ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರನ್ನು ಗುರಿಯಾಗಿಸಿಕೊಂಡು ಅಪರಿಚಿತ ದರೋಡೆಕೋರನೊಬ್ಬ ದೇವರ ಪ್ರಸಾದದ ಹೆಸರಿನಲ್ಲಿ ವಂಚಿಸಿ, ಕೋಟ್ಯಂತರ ಭಕ್ತರ ಆರಾಧ್ಯ ದೈವದ ಸನ್ನಿಧಿಯಲ್ಲೇ ವೃದ್ಧೆಯೊಬ್ಬರ ಚಿನ್ನಾಭರಣ ಹಾಗೂ ನಗದು ಲೂಟಿ ಮಾಡಿರುವ ಕಳವಳಕಾರಿ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮಹಾದ್ವಾರದ ಮುಂಭಾಗದಲ್ಲೇ ಈ ಹಗಲು ದರೋಡೆ ನಡೆದಿದೆ.
ಬೆಂಗಳೂರಿನ ಜೆ.ಪಿ. ನಗರ ನಿವಾಸಿಯಾದ ಪ್ರೇಮ (70 ವರ್ಷ) ಎಂಬ ವೃದ್ಧೆ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ ಬೆಂಗಳೂರಿಗೆ ಮರಳಲು ಬಸ್ ನಿಲ್ದಾಣದ ಬಳಿ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧೆಯೊಂದಿಗೆ ಅತ್ಯಂತ ಆತ್ಮೀಯವಾಗಿ ಮಾತನಾಡಿ ನಂಬಿಕೆ ದ್ರೋಹ ಎಸಗಿದ್ದಾನೆ. ತಾನು ತಂದಿರುವುದು ದೇವರ ಪ್ರಸಾದ ಎಂದು ಹೇಳಿ ಲಡ್ಡು ಹಾಗೂ ಜ್ಯೂಸ್ ನೀಡಿದ್ದಾನೆ. ಅದನ್ನು ದೇವರ ಪ್ರಸಾದವೆಂದೇ ಭಾವಿಸಿ ಸೇವಿಸಿದ ಪ್ರೇಮ ಅವರು ಕೆಲವೇ ಕ್ಷಣಗಳಲ್ಲಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ:ಮದುವೆ ದಿಬ್ಬಣ ಹೊರಡುವಾಗಲೇ ತಂದೆಯ ಕಳ್ಳಾಟ ಬಯಲು ಮಾಡಿದ ಮಗಳು!
ವೃದ್ಧೆ ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ತನ್ನ ಅಸಲಿ ಆಟ ಶುರು ಮಾಡಿದ ಖದೀಮ, ಅವರ ಕೊರಳಿನಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ಕೈಯಲ್ಲಿದ್ದ 20 ಗ್ರಾಂ ಚಿನ್ನದ ಬಳೆಗಳು ಹಾಗೂ ಪರ್ಸ್ನಲ್ಲಿದ್ದ 7 ಸಾವಿರ ರೂಪಾಯಿ ನಗದನ್ನು ದೋಚಿದ್ದಾನೆ. ಒಟ್ಟು 100 ಗ್ರಾಂ (10 ತೊಲ) ಚಿನ್ನಾಭರಣ ಸೇರಿದಂತೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಲೂಟಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ರಸ್ತೆ ಬದಿಯಲ್ಲಿ ಅಸ್ವಸ್ಥಗೊಂಡು ಬಿದ್ದಿದ್ದ ವೃದ್ಧೆಯನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ಭೀಕರ ದರೋಡೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದೆ. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದಲ್ಲಿ ಭಕ್ತರನ್ನು ಮರುಳು ಮಾಡಿ ನಡುರಸ್ತೆಯಲ್ಲೇ ಲೂಟಿ ಮಾಡಿರುವ ಖದೀಮನ ಪತ್ತೆಗಾಗಿ ಪೊಲೀಸರು ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಜಾಲಾಡುತ್ತಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


