ಮೈಸೂರು: ರಾಜಕೀಯ ಜಂಜಾಟಗಳ ನಡುವೆಯೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮೈಸೂರು ಜಿಲ್ಲೆಯ ನಂಜನಗೂಡಿನ ಪೂಜಾ ಎಂಬ ಯುವತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಸಾಕ್ಷಾತ್ ‘ದೈವ’ವಾಗಿ ಬಂದಿದ್ದಾರೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ 24 ವರ್ಷದ ಪೂಜಾ ಎಂಬ ಯುವತಿ ಮಾರಕ ಕಾಯಿಲೆಗೆ ತುತ್ತಾಗಿ, ಬರೋಬ್ಬರಿ 11 ಶಸ್ತ್ರಚಿಕಿತ್ಸೆಗಳನ್ನು ಎದುರಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅಂತಿಮವಾಗಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಇತ್ತ ಪತ್ನಿಯ ಕಾಯಿಲೆಯಿಂದ ಕಂಗಾಲಾಗಿದ್ದ ಪತಿ ರವಿ ಕೂಡ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೆಲಸವಿಲ್ಲದೆ ಮನೆಯಲ್ಲೇ ಉಳಿಯುವಂತಾಗಿತ್ತು. ಪುಟ್ಟ ಮಕ್ಕಳನ್ನು ಕಟ್ಟಿಕೊಂಡು ಜೀವನ ನಡೆಸಲು ದಾರಿಯೇ ಇಲ್ಲದಂತಾದಾಗ ಪೂಜಾ ಅವರು “ನನ್ನ ಸಂಕಷ್ಟವನ್ನು ಕುಮಾರಣ್ಣನಿಗೆ ತಲುಪಿಸಿ” ಎಂದು ಅಳಲು ತೋಡಿಕೊಂಡಿದ್ದರು.

ಪೂಜಾ ಅವರ ಕೂಗು ಕೇಳಿದ ಕುಮಾರಸ್ವಾಮಿಯವರು, ಇಂದು ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ನೇರವಾಗಿ ಹುಲ್ಲಹಳ್ಳಿ ಗ್ರಾಮದ ಪೂಜಾ ಅವರ ಮನೆಗೆ ಭೇಟಿ ನೀಡಿದರು. ಹಾಸಿಗೆಯಲ್ಲಿ ಮಲಗಿದ್ದ ಪೂಜಾ ಅವರ ಸ್ಥಿತಿಯನ್ನು ಕಂಡು ಮರುಗಿದ ಸಚಿವರು, ಅವರ ತಂದೆ-ತಾಯಿಗೆ ಧೈರ್ಯ ತುಂಬಿದರು.
ಕುಮಾರಸ್ವಾಮಿ ನೀಡಿದ ನೆರವುಗಳು:

ಆರ್ಥಿಕ ಸಹಾಯ: ಸ್ಥಳದಲ್ಲೇ ಕುಟುಂಬಕ್ಕೆ ವೈಯಕ್ತಿಕವಾಗಿ ಧನಸಹಾಯ ಮಾಡಿದರು.
ಮನೆಯ ಲೀಸ್ ಮುಕ್ತಿ: ಕುಟುಂಬಕ್ಕೆ ದೊಡ್ಡ ತಲೆನೋವಾಗಿದ್ದ ಮನೆಯ ಲೀಸ್ ಹಣವನ್ನು ತಾವೇ ಪಾವತಿಸುವುದಾಗಿ ಭರವಸೆ ನೀಡುವ ಮೂಲಕ ಕುಟುಂಬವನ್ನು ಸಾಲಮುಕ್ತಗೊಳಿಸಿದರು.

ಕಾನೂನು ನೆರವು: ಪತಿ ರವಿ ಅವರ ಅಪಘಾತದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಜೊತೆ ಚರ್ಚಿಸಿ ಸೂಕ್ತ ವಿಮಾ ಪರಿಹಾರ ಕೊಡಿಸುವಂತೆ ಸ್ಥಳೀಯ ಮುಖಂಡರಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ರ್ಯಾಂಕ್ ಪಟ್ಟಿಯಲ್ಲಿ ಅಂಬಿಕಾ ವಿದ್ಯಾರ್ಥಿಗಳ ಪಾರುಪತ್ಯ; ವಿಜ್ಞಾನ ಮತ್ತು ವಾಣಿಜ್ಯ ಎರಡೂ ವಿಭಾಗಗಳಲ್ಲಿ ನೂರಕ್ಕೆ ನೂರು ಸಾಧನೆ
ಮೆಚ್ಚುಗೆಯ ಮಹಾಪೂರ
“ರಾಜಕಾರಣ ಎಂದರೆ ಕೇವಲ ಅಧಿಕಾರವಲ್ಲ, ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವುದು” ಎಂಬುದನ್ನು ಕುಮಾರಸ್ವಾಮಿ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮಗನಂತೆ ಮನೆಗೆ ಬಂದು ಆಸರೆಯಾದ ಕುಮಾರಣ್ಣನ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಶಾಸಕ ಹರೀಶ್ ಗೌಡ, ಎಂಎಲ್ಸಿ ಮಂಜೇಗೌಡ ಸೇರಿದಂತೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

