ದೆಹಲಿ: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯಕ್ಕೆ ಇನ್ನು ಕೇವಲ ಎರಡು ದಿನಗಳು ಬಾಕಿ ಇರುವಾಗ, ಭಾರತ ಕ್ರಿಕೆಟ್ ತಂಡಕ್ಕೆ ದೊಡ್ಡ ಆತಂಕ ಎದುರಾಗಿದೆ. ದೆಹಲಿಯಲ್ಲಿ ನಡೆದ ತೀವ್ರ ತರಬೇತಿ ಅವಧಿಯಲ್ಲಿ ತಂಡದ ಪ್ರಮುಖ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಬೆನ್ನಿನ ಗಾಯಕ್ಕೆ ಒಳಗಾಗಿದ್ದಾರೆ. ಈಸ್ಟ್ ಝೋನ್ ತಂಡವನ್ನು ದುಲೀಪ್ ಟ್ರೋಫಿ ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಇಶಾನ್ ಕಿಶನ್ ಭಾರತೀಯ ತಂಡವನ್ನು ಸೇರಿಕೊಂಡಿದ್ದರು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ನೆಟ್ ಬೌಲರ್ ಆಗಿ ಬೌಲಿಂಗ್ ಮಾಡುತ್ತಿದ್ದ ನವದೀಪ್ ಸೈನಿ ಎಸೆದ ಬೌನ್ಸರ್ ಬಾಲ್ನಿಂದ ತಪ್ಪಿಸಿಕೊಳ್ಳಲು (Duck) ಯತ್ನಿಸಿದಾಗ ಇಶಾನ್ ಕಿಶನ್ ಅವರ ಬೆನ್ನಿನ ಭಾಗಕ್ಕೆ ಪೆಟ್ಟಾಗಿದೆ. ಸುಮಾರು 45 ನಿಮಿಷಗಳ ಕಾಲ ಭರ್ಜರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದ ಕಿಶನ್, ತರಬೇತಿಯ ಕೊನೆಯ ಹಂತದಲ್ಲಿ ಗಾಯಗೊಂಡು ಅಸ್ವಸ್ಥರಾದರು. ತಕ್ಷಣವೇ ಮೈದಾನಕ್ಕೆ ಆಗಮಿಸಿದ ತಂಡದ ಫಿಸಿಯೋಗಳು ಇಶಾನ್ ಕಿಶನ್ ಅವರ ತಪಾಸಣೆ ನಡೆಸಿದರು.
ಗಾಯದ ಬಳಿಕ ಸ್ವತಃ ತಾವೇ ನಡೆದುಕೊಂಡು ಬಂದ ಕಿಶನ್, ಸಹಪಟುಗಳೊಂದಿಗೆ ಐಸ್ ಬಾಕ್ಸ್ ಮೇಲೆ ಕುಳಿತು ವಿಶ್ರಾಂತಿ ಪಡೆದರು. ಆ ನಂತರ ಬ್ಯಾಟಿಂಗ್ ಮುಂದುವರಿಸದೇ ಮೈದಾನದಿಂದ ಹೊರನಡೆದರು. ಗಾಯಗೊಳ್ಳುವ ಮುನ್ನ ಕಿಶನ್ ನಾಯಕ ಶ್ರೇಯಸ್ ಅಯ್ಯರ್ ಅವರೊಂದಿಗೆ ಅತ್ಯುತ್ತಮ ಟೈಮಿಂಗ್ನೊಂದಿಗೆ ಬ್ಯಾಟಿಂಗ್ ನಡೆಸುತ್ತಿದ್ದರು.
ತಂಡಕ್ಕೆ ಪುನರಾಗಮನ ಮಾಡಿದಂದಿನಿಂದ ಇಶಾನ್ ಕಿಶನ್ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದಾರೆ. 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತೋರಿದ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಮತ್ತೆ ಅವಕಾಶ ಸಿಕ್ಕಿತ್ತು. 2026ರ ವರ್ಷದಲ್ಲಿ ಇಶಾನ್ ಕಿಶನ್ 23 ಟಿ20 ಪಂದ್ಯಗಳಿಂದ 812 ರನ್ ಕಲೆಹಾಕಿದ್ದು, ಈ ವರ್ಷ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿದ 2ನೇ ಆಟಗಾರನಾಗಿದ್ದಾರೆ. ಮುಂಬರುವ ‘ಏಷ್ಯನ್ ಗೇಮ್ಸ್ 2026’ ಗಾಗಿ ಜಪಾನ್ಗೆ ಪ್ರಯಾಣಿಸಲಿರುವ ಭಾರತ ತಂಡದಲ್ಲೂ ಕಿಶನ್ ಪ್ರಮುಖ ಸದಸ್ಯರಾಗಿದ್ದಾರೆ.
ಹೀಗಾಗಿ ಇಶಾನ್ ಕಿಶನ್ ಗಾಯವು ಗಂಭೀರವಾಗಿರಬಾರದು ಮತ್ತು ಅವರು ಶೀಘ್ರ ಚೇತರಿಸಿಕೊಳ್ಳಬೇಕು ಎಂದು ಭಾರತೀಯ ಅಭಿಮಾನಿಗಳು ಹಾಗೂ ಟೀಮ್ ಇಂಡಿಯಾ ಆಡಳಿತ ಮಂಡಳಿ ಹಾರೈಸುತ್ತಿದೆ. ಇನ್ನೊಂದೆಡೆ, ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ವೈಭವ್ ಸೂರ್ಯವಂಶಿ ಅವರ ನಡುವೆ ಓಪನಿಂಗ್ ಸ್ಲಾಟ್ಗಾಗಿ ಪೈಪೋಟಿ ಏರ್ಪಟ್ಟಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಪಂದ್ಯವು ಸೆಪ್ಟೆಂಬರ್ 13ರ ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

