ಮಂಗಳೂರು: ಗುರುಪುರ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ನಾಪತ್ತೆಯಾಗಿದ್ದ 30 ವರ್ಷದ ಕೌಶಿಕ್ ಬೆಲ್ಚಡ ಅವರ ಮೃತದೇಹವು ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ. ಬುಧವಾರ ಸಂಜೆ ನಡೆದ ಈ ಆಘಾತಕಾರಿ ಘಟನೆಯು ಕೌಟುಂಬಿಕ ವಲಯದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಕಜೆ ಪಡ್ಡಾಯಿಬೆಟ್ಟು ನಿವಾಸಿಯಾದ ಕೌಶಿಕ್, ಬುಧವಾರ ಸಂಜೆ 6:30ರ ಸುಮಾರಿಗೆ ತಮ್ಮ ಸ್ಕೂಟರ್ನಲ್ಲಿ ಗುರುಪುರ ಸೇತುವೆಯ ಬಳಿ ಬಂದಿದ್ದರು. ಸೇತುವೆಯ ಮೇಲೆ ಸ್ಕೂಟರ್ ನಿಲ್ಲಿಸಿದ ಅವರು ಹಠಾತ್ತನೆ ನದಿಗೆ ಹಾರಿದ್ದಾರೆ ಎಂದು ತಿಳಿದುಬಂದಿದೆ.
ಬುಧವಾರ ರಾತ್ರಿ ಕತ್ತಲೆಯಾದ ಕಾರಣ ಶೋಧ ನಡೆಸಲು ಅಡ್ಡಿಯಾಗಿತ್ತು. ಇಂದು ಬೆಳಿಗ್ಗೆ ಮಂಗಳೂರು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪಾಣೆಮಂಗಳೂರಿನ ಈಜು ತಜ್ಞರು (ಡೈವಿಂಗ್ ತಜ್ಞರು) ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು. ಸೇತುವೆಯ ಕಂಬಗಳ ಸುತ್ತ ನಡೆಸಿದ ತೀವ್ರ ಹುಡುಕಾಟದ ನಂತರ ಮಧ್ಯಾಹ್ನದ ವೇಳೆಗೆ ಮೃತದೇಹ ಪತ್ತೆಯಾಗಿದ್ದು, ಅದನ್ನು ನದಿಯಿಂದ ಹೊರತೆಗೆಯಲಾಗಿದೆ.

ಇದನ್ನೂ ಓದಿ: ಮಂಗಳೂರು ASI ಕೊಲೆಯತ್ನ ಪ್ರಕರಣ: ವಿದೇಶದಲ್ಲಿರುವ ಆರೋಪಿ ಸಮೀರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್!
ಸ್ಥಳಕ್ಕೆ ಭೇಟಿ ನೀಡಿದ್ದ ಬಜ್ಪೆ ಪೊಲೀಸರು ಘಟನಾ ಸ್ಥಳದಲ್ಲಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಕೃತ್ಯಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನಷ್ಟು ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ


