ಮಂಡ್ಯ: ಮದ್ದೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ನಡೆಸುತ್ತಿರುವ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯ ಕುರಿತು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ಮತ್ತು ಜೆಡಿಎಸ್ನವರು ವಿಘ್ನನಿವಾರಕ ಗಣಪತಿಯನ್ನು ತಮ್ಮ ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳಬಾರದು” ಎಂದು ಕಿಡಿಕಾರಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರಿಗೆ ಸಚಿವರ ಟಾಂಗ್:
ಅಶೋಕ್ಗೆ ತಿರುಗೇಟು: “ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿಯವರಿಗೆ ಗಣಪತಿ ಒಳ್ಳೆಯ ಬುದ್ಧಿ ನೀಡಲಿ. ಅವರು ಬಹಳ ಪ್ಲಾನ್ ಮಾಡಿಕೊಂಡು ಏನೋ ಮಾಡಲು ಹೊರಟಿದ್ದಾರೆ. ಆದರೆ ಅವರ ಈ ಪ್ರಯತ್ನಗಳಿಗೆ ಯಾವುದೇ ಫಲ ಸಿಗುವುದಿಲ್ಲ. ಈ ರೀತಿಯ ರಾಜಕೀಯ ಹೋರಾಟಗಳು ಒಳ್ಳೆಯದಲ್ಲ,” ಎಂದು ಸಚಿವ ಚಲುವರಾಯಸ್ವಾಮಿ ಲೇವಡಿ ಮಾಡಿದರು.
ಇದನ್ನೂ ಓದಿ: ಆಹಾರ ಸುರಕ್ಷತೆಗೆ ಕ್ಯೂಆರ್ ಕೋಡ್ ಕಡ್ಡಾಯ, ಮಂಗಳೂರು ದಸರಾ ಸಂಭ್ರಮ: ಯು.ಟಿ. ಖಾದರ್ ಮಹತ್ವದ ಘೋಷಣೆ
ಹೆಚ್.ಡಿ. ಕುಮಾರಸ್ವಾಮಿಗೆ ಟಾಂಗ್:
ರಾಜ್ಯದಲ್ಲಿ ‘ಅಲ್ಲೋಲ ಕಲ್ಲೋಲ’ ಉಂಟಾಗಲಿದೆ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, “ರಾಜ್ಯದಲ್ಲಿ ನಿಜವಾಗಿಯೂ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದಿದ್ದರೆ ಹೆಚ್ಡಿಕೆಯವರಿಗೆ ಅಮೆರಿಕ ಪ್ರವಾಸ ಮುಖ್ಯವಾಗುತ್ತಿತ್ತಾ? ಸುಮ್ಮನೆ ರಾಜಕೀಯ ಲಾಭಕ್ಕಾಗಿ ಅದೆಲ್ಲ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಬಿಡಿ,” ಎಂದು ವ್ಯಂಗ್ಯವಾಡಿದರು.
ಶಾಂತಿಯುತವಾಗಿ ನಡೆಯಬೇಕಾದ ಧಾರ್ಮಿಕ ಆಚರಣೆಗಳಲ್ಲಿ ರಾಜಕೀಯ ಬೆರೆಸಿ ಸಮಾಜದಲ್ಲಿ ಗೊಂದಲ ಸೃಷ್ಟಿಸಲು ಮೈತ್ರಿ ಪಕ್ಷಗಳು ಯತ್ನಿಸುತ್ತಿವೆ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

