ಪುತ್ತೂರು: ಮೂರು ವಾರಗಳ ಹಿಂದೆ ನಾಪತ್ತೆಯಾಗಿದ್ದ ಕಂಟ್ರಿ (ದೇಶಿ) ತಳಿಯ ಹೆಣ್ಣು ಸಾಕು ನಾಯಿಯೊಂದು ಕೊನೆಗೂ ಪತ್ತೆಯಾಗಿದ್ದು, ಅದನ್ನು ಸುರಕ್ಷಿತವಾಗಿ ಹುಡುಕಿಕೊಟ್ಟ ವ್ಯಕ್ತಿಗೆ ನಾಯಿಯ ಮಾಲೀಕರು ಭರವಸೆ ನೀಡಿದಂತೆಯೇ ಬರೋಬ್ಬರಿ 50,000 ರೂಪಾಯಿ ನಗದು ಬಹುಮಾನವನ್ನು ಹಸ್ತಾಂತರಿಸಿದ್ದಾರೆ. ಕರಾವಳಿ ಭಾಗದಲ್ಲಿ ಪ್ರಾಣಿ ಪ್ರೇಮದ ಅಪರೂಪದ ಉದಾಹರಣೆಯಾಗಿ ಈ ಘಟನೆ ಭಾರಿ ಸುದ್ದಿಯಾಗಿದೆ.
ಪುತ್ತೂರಿನ ಕಬಕ ಸಮೀಪದ ಪೋಲ್ಯ ನಿವಾಸಿ ಗಣೇಶ್ ಕೇರ ಎಂಬುವವರ ಮನೆಯಿಂದ ‘ಚಿನ್ನು’ ಹೆಸರಿನ ದೇಶಿ ತಳಿಯ ಸಾಕು ನಾಯಿ ಜೂನ್ ಮೊದಲ ವಾರದಲ್ಲಿ ದಿಢೀರ್ ನಾಪತ್ತೆಯಾಗಿತ್ತು. ನಾಯಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಗಣೇಶ್ ಕೇರ ಅವರು ತಮ್ಮ ಮನೆಯಲ್ಲಿ ವಿವಿಧ ತಳಿಗಳ ಸುಮಾರು 30 ಕ್ಕೂ ಹೆಚ್ಚು ನಾಯಿಗಳನ್ನು ಸಾಕಿ ಸಲಹುತ್ತಿದ್ದಾರೆ. ಚಿನ್ನು ಈ ಹಿಂದೆ ಫಿಟ್ಸ್ (Fits) ಕಾಯಿಲೆಯಿಂದ ಬಳಲುತ್ತಿತ್ತು ಹಾಗೂ ಅದರ ಹಿಂಗಾಲುಗಳ ಶಕ್ತಿ ಕುಂದಿತ್ತು. ಇಂತಹ ಅಸಹಾಯಕ ಸ್ಥಿತಿಯಲ್ಲಿದ್ದ ನಾಯಿ ನಾಪತ್ತೆಯಾಗಿದ್ದರಿಂದ ಕಳವಳಗೊಂಡ ಗಣೇಶ್, ಅದನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದರು.

ಇದನ್ನೂ ಓದಿ:Puttur : ಕಳ್ಳತನ್ನ ತಪ್ಪಿಸಲು ಚಪ್ಪಲ್ ಗೆ ಬೀಗದ ಭದ್ರತೆ!
ಚಿನ್ನು ನಾಪತ್ತೆಯಾದ ದಿನದಿಂದ ಇಡೀ ಪರಿಸರದಲ್ಲಿ ತೀವ್ರ ಹುಡುಕಾಟ ನಡೆಸಲಾಗಿತ್ತು. ಕೊನೆಗೂ ಪೋಲ್ಯ ಪ್ರದೇಶದ ಮತ್ತೊಬ್ಬ ನಿವಾಸಿಯಾದ ಪುರಂದರ ಎಂಬುವವರು ಈ ನಾಯಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಿ ಸಿಕ್ಕ ತಕ್ಷಣ ಅವರು ಮಾಲೀಕ ಗಣೇಶ್ ಕೇರ ಅವರಿಗೆ ಮಾಹಿತಿ ನೀಡಿದ್ದಾರೆ. ತಮ್ಮ ನೆಚ್ಚಿನ ಮೂಕಪ್ರಾಣಿ ಸುರಕ್ಷಿತವಾಗಿ ಸಿಕ್ಕಿದ ತಕ್ಷಣ ಅತ್ಯಂತ ಸಂತಸಗೊಂಡ ಗಣೇಶ್ ಕೇರ ಅವರು, ಪುರಂದರ ಅವರ ಪ್ರಾಮಾಣಿಕ ಪ್ರಯತ್ನವನ್ನು ಶ್ಲಾಘಿಸಿ, ತಾವೇ ಘೋಷಿಸಿದ್ದ ₹50,000 ನಗದು ಬಹುಮಾನವನ್ನು ಸ್ಥಳದಲ್ಲೇ ಹಸ್ತಾಂತರಿಸಿ ಮನುಷ್ಯತ್ವ ಮೆರೆದಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

