ದೆಹಲಿ: “ನನಗೆ ದೇಶದ ಜನರ ಸೇವೆ ಮಾಡಲು ಸುದೀರ್ಘ ಅವಕಾಶ ಸಿಕ್ಕಿದೆ. ಜನರ ಸೇವೆ ಮಾಡುವುದೊಂದೇ ನನ್ನ ಏಕೈಕ ಉದ್ದೇಶವಾಗಿದ್ದು, ಇದಕ್ಕಾಗಿ ನಾವು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ” ಎಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ದೆಹಲಿಯ ಭಾರತ್ ಮಂಟಪಂನಲ್ಲಿ ಆಯೋಜಿಸಲಾಗಿದ್ದ ಎನ್ಡಿಎ ಮೈತ್ರಿಕೂಟದ ನಾಯಕರ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಮಂತ್ರಿಯಾಗಿ ಯಶಸ್ವಿ ಆಡಳಿತ ಪೂರ್ಣಗೊಳಿಸಿರುವ ವಿಶೇಷ ಹಿನ್ನೆಲೆಯಲ್ಲಿ ಈ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಹಳೆಯ ದಿನಗಳನ್ನು ಸ್ಮರಿಸಿದ ಪ್ರಧಾನಿ ಮೋದಿ, “ದೇಶದ ಜನರಿಗೆ ಕಾಂಗ್ರೆಸ್ ಸದಾ ವಿಶ್ವಾಸದ್ರೋಹ ಮಾಡುತ್ತಾ ಬಂದಿದೆ. ಆದರೆ, ನಾವು 2014ರಿಂದ ದೇಶದಲ್ಲಿ ಸಂಪೂರ್ಣ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ. ಇಂದು ಇಡೀ ಭಾರತವು ಕಾಂಗ್ರೆಸ್ನ ಭ್ರಷ್ಟಾಚಾರದ ಕಪಿಮುಷ್ಟಿಯಿಂದ ಮುಕ್ತವಾಗಿದೆ. ಎನ್ಡಿಎ ಸರ್ಕಾರವು ದೇಶಕ್ಕೆ ರಾಜಕೀಯ ಸ್ಥಿರತೆಯನ್ನು ತಂದುಕೊಟ್ಟಿದೆ. ಯುವಕರು ಹಾಗೂ ಮಹಿಳೆಯರಿಗೆ ನಾವು ನೀಡಿದ್ದ ಪ್ರತಿಯೊಂದು ಭರವಸೆಗಳನ್ನು ಈಡೇರಿಸಿದ್ದೇವೆ” ಎಂದು ಹೆಮ್ಮೆಯಿಂದ ಘೋಷಿಸಿದರು.
ದೇಶದ ಆರ್ಥಿಕ ಮತ್ತು ಮೂಲಸೌಕರ್ಯ ಪ್ರಗತಿಯ ಅಂಕಿ-ಅಂಶಗಳನ್ನು ತೆರೆದಿಟ್ಟ ಪ್ರಧಾನಿ, “ವಿಶ್ವದಾದ್ಯಂತ ಯುದ್ಧದ ವಾತಾವರಣ ಮತ್ತು ಆರ್ಥಿಕ ಹಿಂಜರಿತ ಇದ್ದಾಗಲೂ ಭಾರತದ ಜಿಡಿಪಿ (GDP) ಪ್ರಗತಿ ದರವು ಶೇ. 7.7 ಕ್ಕೆ ಏರಿಕೆಯಾಗಿದೆ. ಇಂದು ಡಿಜಿಟಲ್ ಪಾವತಿ (Digital Payments) ಕ್ಷೇತ್ರದಲ್ಲಿ ಭಾರತ ಇಡೀ ಜಗತ್ತಿಗೆ ಮುಂಚೂಣಿಯಲ್ಲಿದೆ. 2014 ರ ನಂತರ ದೇಶದ ಅಭಿವೃದ್ಧಿಯ ವೇಗ ಗಣನೀಯವಾಗಿ ಹೆಚ್ಚಾಗಿದ್ದು, ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಇದರ ಅನುಕೂಲ ಸಿಗುತ್ತಿದೆ. ದೇಶದ 20 ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಇಂದು ಹೈಟೆಕ್ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲಾಗಿದೆ” ಎಂದರು.
“ನಾವು ಮಧ್ಯಮ ವರ್ಗದ ಜನರ ಕಷ್ಟ ಮತ್ತು ಸಮಸ್ಯೆಗಳನ್ನು ಹತ್ತಿರದಿಂದ ಅರಿತುಕೊಂಡು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಭವಿಷ್ಯದಲ್ಲಿ ನಾವು ಇನ್ನೂ ಸಾಕಷ್ಟು ಕಠಿಣ ಸವಾಲುಗಳನ್ನು ಎದುರಿಸಬೇಕಾಗಬಹುದು, ಅದಕ್ಕೆ ನಾವೆಲ್ಲರೂ ಸಿದ್ಧರಾಗಬೇಕಿದೆ. ಈ ಸುದೀರ್ಘ ಅವಧಿಯ ಆಡಳಿತದ ಅವಕಾಶಕ್ಕಾಗಿ ನಾನು ದೇಶದ ಜನತೆಗೆ ತಲೆಬಾಗಿ ನಮಸ್ಕರಿಸುತ್ತೇನೆ. ಈ ಎಲ್ಲಾ ಯಶಸ್ಸು ನಮ್ಮೆಲ್ಲರ ಸಾಮೂಹಿಕ ಸಾಧನೆಯಾಗಿದ್ದು, ಇದನ್ನು ನಾನು ಪಕ್ಷದ ಕೋಟ್ಯಾಂತರ ನಿಷ್ಠಾವಂತ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ” ಎಂದು ಭಾವುಕರಾಗಿ ನುಡಿದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


