ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ವಿರುದ್ಧ ನೀಡಲಾಗಿರುವ ಮರಣದಂಡನೆ ತೀರ್ಪನ್ನು ತೀವ್ರವಾಗಿ ಖಂಡಿಸಿದ್ದು, “ಈ ವರ್ಷವೇ ಎಲ್ಲ ಅಡೆತಡೆಗಳನ್ನು ಮೀರಿ ಬಾಂಗ್ಲಾದೇಶಕ್ಕೆ ಮರಳುತ್ತೇನೆ” ಎಂದು ಘೋಷಿಸಿದ್ದಾರೆ.
ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಸೀನಾ, ತಮ್ಮ ವಿರುದ್ಧದ ತೀರ್ಪು ನ್ಯಾಯವಲ್ಲ, ಬದಲಾಗಿ ರಾಜಕೀಯ ಪ್ರೇರಿತ ಕ್ರಮ ಎಂದು ಆರೋಪಿಸಿದರು. ತಮ್ಮ ಪಕ್ಷವಾದ ಅವಾಮಿ ಲೀಗ್ ಅನ್ನು ನಾಯಕತ್ವವಿಲ್ಲದ ಪಕ್ಷವನ್ನಾಗಿ ಮಾಡುವ ಉದ್ದೇಶದಿಂದ ಅಕ್ರಮ ಹಾಗೂ ಅಸಂವಿಧಾನಿಕ ಪ್ರಕ್ರಿಯೆ ಮೂಲಕ ಈ ತೀರ್ಪು ನೀಡಲಾಗಿದೆ ಎಂದು ಅವರು ಹೇಳಿದರು.

“ಇದು ನ್ಯಾಯವಲ್ಲ. ನ್ಯಾಯಾಂಗವನ್ನು ರಾಜಕೀಯ ಪ್ರತೀಕಾರದ ಸಾಧನವನ್ನಾಗಿ ಬಳಸಲಾಗಿದೆ. ಅವಾಮಿ ಲೀಗ್ ಅನ್ನು ನಾಯಕತ್ವವಿಲ್ಲದ ಪಕ್ಷವನ್ನಾಗಿ ಮಾಡಲು ಈ ಪ್ರಯತ್ನ ನಡೆದಿದೆ. ಇಂತಹ ಪ್ರಯತ್ನಗಳು ಈ ಹಿಂದೆಯೂ ನಡೆದಿವೆ. ಆಗಲೂ ವಿಫಲವಾಗಿದ್ದವು, ಈಗಲೂ ವಿಫಲವಾಗಲಿವೆ,” ಎಂದು ಹಸೀನಾ ಹೇಳಿದರು.
ಸಾವಿನ ಭಯ ನನಗಿಲ್ಲ ಎಂದ ಹಸೀನಾ, 1975ರಲ್ಲಿ ತಮ್ಮ ತಂದೆ ಹಾಗೂ ಬಾಂಗ್ಲಾದೇಶದ ರಾಷ್ಟ್ರಪಿತ ಎಂದು ಪರಿಗಣಿಸಲ್ಪಡುವ ಶೇಖ್ ಮುಜಿಬುರ್ ರೆಹಮಾನ್ ಸೇರಿದಂತೆ ತಮ್ಮ ಕುಟುಂಬದ ಬಹುತೇಕ ಸದಸ್ಯರನ್ನು ಕಳೆದುಕೊಂಡಿದ್ದನ್ನು ನೆನಪಿಸಿಕೊಂಡರು. 2004ರಲ್ಲಿ ತಮ್ಮ ಮೇಲೆ ಗ್ರೆನೇಡ್ ದಾಳಿ ನಡೆದಿದ್ದನ್ನೂ ಉಲ್ಲೇಖಿಸಿ, ಹಲವು ಸಂಚುಗಳನ್ನು ಎದುರಿಸಿ ಜನರ ಬೆಂಬಲದಿಂದ ಐದು ಬಾರಿ ಪ್ರಧಾನಿಯಾಗಿದ್ದೇನೆ ಎಂದು ಹೇಳಿದರು.
“ನನ್ನ ಜೀವನ ಬಾಂಗ್ಲಾದೇಶದ ಜನತೆ, ಅವಾಮಿ ಲೀಗ್ ಹಾಗೂ ಪ್ರಜಾಪ್ರಭುತ್ವದ ಹೋರಾಟದೊಂದಿಗೆ ಬೆಸೆದುಕೊಂಡಿದೆ. ಎಲ್ಲಾ ಅಡೆತಡೆಗಳನ್ನು ಮೀರಿ ನಾನು ಈ ವರ್ಷವೇ ನನ್ನ ದೇಶಕ್ಕೆ ಮರಳುತ್ತೇನೆ,” ಎಂದು ಅವರು ಸ್ಪಷ್ಟಪಡಿಸಿದರು.
ಹಸೀನಾ ವಿರುದ್ಧದ ಪ್ರಕರಣ ಏನು?
2024ರ ಜುಲೈ ತಿಂಗಳಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ವೇಳೆ ಸರ್ಕಾರ ನಡೆಸಿದ ದಮನ ಕ್ರಮಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಶೇಖ್ ಹಸೀನಾ ಅವರನ್ನು ಮಾನವತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಿತ್ತು.
ನ್ಯಾಯಮಂಡಳಿಯ ಪ್ರಕಾರ, ಪ್ರತಿಭಟನಾಕಾರರ ವಿರುದ್ಧ ಡ್ರೋನ್, ಹೆಲಿಕಾಪ್ಟರ್ ಹಾಗೂ ಮಾರಕ ಶಸ್ತ್ರಾಸ್ತ್ರಗಳನ್ನು ಬಳಸಲು ಆದೇಶ ನೀಡುವುದು ಸೇರಿದಂತೆ ಹಲವು ಆರೋಪಗಳು ಸಾಬೀತಾಗಿವೆ. ವಿಶ್ವಸಂಸ್ಥೆಯ ಅಂದಾಜಿನಂತೆ ಆ ಪ್ರತಿಭಟನೆಗಳಲ್ಲಿ ಸುಮಾರು 1,400 ಮಂದಿ ಮೃತಪಟ್ಟಿದ್ದರು.
ಆದರೆ ಹಸೀನಾ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದು, ನ್ಯಾಯಮಂಡಳಿಯು ಮಧ್ಯಂತರ ಸರ್ಕಾರದ ರಾಜಕೀಯ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬೆಳವಣಿಗೆ ಕುರಿತು ಭಾರತ ಸರ್ಕಾರ ಪ್ರತಿಕ್ರಿಯಿಸಿದ್ದು, ಬಾಂಗ್ಲಾದೇಶದ ಸ್ಥಿರತೆ, ಪ್ರಜಾಪ್ರಭುತ್ವ ಹಾಗೂ ಅಲ್ಲಿನ ಜನರ ಹಿತಾಸಕ್ತಿಗೆ ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

