ಬೆಂಗಳೂರು: ಚಿಕ್ಕಬಳ್ಳಾಪುರದ ಯುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಇತ್ತೀಚೆಗೆ ನಡೆದ ಚಪ್ಪಲಿ ಎಸೆತ ಪ್ರಕರಣ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ನಿಂದನೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಕಣ್ಣೀರು ಹಾಕಿದ ಪ್ರಸಂಗ ಮಂಗಳವಾರ ನಡೆದಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಾರ್ವಜನಿಕವಾಗಿ ತಮ್ಮ ಮೇಲೆ ಚಪ್ಪಲಿ ಎಸೆದಿದ್ದಲ್ಲದೆ, ತಮ್ಮ ಹಾಗೂ ತಮ್ಮ ಕುಟುಂಬವನ್ನು ಅತ್ಯಂತ ಕೀಳಾಗಿ ನಿಂದಿಸಿದ್ದನ್ನು ವಿವರಿಸಿ ಪ್ರದೀಪ್ ಈಶ್ವರ್ ಭಾವುಕರಾಗಿದ್ದಾರೆ.
ಶಾಸಕರ ಅಳಲನ್ನು ಆಲಿಸಿದ ಸಿದ್ದರಾಮಯ್ಯ ಅವರು ಪ್ರದೀಪ್ ಈಶ್ವರ್ ಅವರಿಗೆ ಬೆನ್ನುತಟ್ಟಿ ಧೈರ್ಯ ತುಂಬಿದ್ದಾರೆ. “ರಾಜಕಾರಣದಲ್ಲಿ ಇಂತಹ ಸವಾಲುಗಳು ಮತ್ತು ಘಟನೆಗಳು ಸಾಮಾನ್ಯ. ಸಾರ್ವಜನಿಕ ಜೀವನದಲ್ಲಿ ಇರುವಾಗ ಇಂಥದ್ದನ್ನೆಲ್ಲಾ ಗಟ್ಟಿಯಾಗಿ ಎದುರಿಸಬೇಕು, ಇದರಿಂದ ಧೃತಿಗೆಡಬೇಡಿ. ಇಡೀ ಪಕ್ಷ ಮತ್ತು ಸರ್ಕಾರ ನಿಮ್ಮೊಂದಿಗೆ ಇದೆ” ಎಂದು ಸಿಎಂ ಭರವಸೆ ನೀಡಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್:
ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ನನ್ನನ್ನು ಭೇಟಿಮಾಡಿ, ಕೆಂಪೇಗೌಡ ಜಯಂತಿ ಆಚರಣೆಯ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ತಮ್ಮ ಮೇಲೆ ಚಪ್ಪಲಿ ಎಸೆದು, ತಮ್ಮ ಕುಟುಂಬದವರನ್ನು ನಿಂದಿಸಿದ್ದು ಸೇರಿದಂತೆ ಅಂದು ನಡೆದ ಎಲ್ಲಾ ಘಟನೆಯನ್ನು ವಿವರಿಸಿ, ತಮ್ಮ ನೋವನ್ನು ಹಂಚಿಕೊಂಡರು.
ರಾಜಕಾರಣದಲ್ಲಿ ಇಂಥಹ ಘಟನೆಗಳು… pic.twitter.com/Z6dLFr2FBk
— Siddaramaiah (@siddaramaiah) June 30, 2026
ಬಳಿಕ ಮಾಜಿ ಮುಖ್ಯಮಂತ್ರಿಗಳು ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ್ದು, ಪೊಲೀಸರ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕರೊಬ್ಬರ ಮೇಲೆ ಇಂತಹ ಕೃತ್ಯ ನಡೆದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ (X) ಮೂಲಕ ಶಾಸಕ ಪ್ರದೀಪ್ ಈಶ್ವರ್ ಪರವಾಗಿ ನಿಂತಿದ್ದು, ವಿರೋಧ ಪಕ್ಷಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಪದಗ್ರಹಣ
“ಸಾರ್ವಜನಿಕವಾಗಿ ಸೋತಾಗ ಸಭ್ಯತೆಯೂ ಸತ್ತುಹೋಗುತ್ತದೆ. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಮೇಲೆ ಚಪ್ಪಲಿ ಎಸೆದ ನೀಚ ಕೃತ್ಯವು ವಿರೋಧ ಪಕ್ಷದವರ ಹತಾಶೆಯ ಪರಮಾವಧಿ. ಒಬ್ಬ ಯುವ ನಾಯಕನ ಜನಪ್ರಿಯತೆ, ಮಾತುಗಳನ್ನ ಜೀರ್ಣಿಸಿಕೊಳ್ಳಲಾಗದೆ ತರ್ಕದ ವೇದಿಕೆಯಿಂದ ತರಗೆಲೆ ರಾಜಕಾರಣಕ್ಕೆ ಇಳಿದಿರುವುದು ನಿಮ್ಮ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಡಿಸಿಎಂ ಕಿಡಿಕಾರಿದ್ದಾರೆ. ಇದು ಬಸವಣ್ಣ ಮತ್ತು ಕುವೆಂಪು ಅವರ ಶಾಂತಿಪ್ರಿಯ ಕರ್ನಾಟಕವಾಗಿದ್ದು, ಇಲ್ಲಿ ಇಂತಹ ವಿಕೃತ ಮತ್ತು ಹಿಂಸಾತ್ಮಕ ಪುಂಡಾಟಿಕೆಗಳಿಗೆ ಜಾಗವಿಲ್ಲ ಎಂದು ಎಚ್ಚರಿಸಿರುವ ಸಿಎಂ ಡಿ.ಕೆ. ಶಿವಕುಮಾರ್, ಸಾರ್ವಜನಿಕ ಸಭ್ಯತೆಯ ಗಡಿ ದಾಟಿದ ಪ್ರತಿಯೊಬ್ಬ ಕಿಡಿಗೇಡಿಯ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

