ಬೆಂಗಳೂರು: ರಾಜ್ಯದಲ್ಲಿ ಶೀಘ್ರದಲ್ಲೇ ಎದುರಾಗಲಿರುವ ಉಪಚುನಾವಣೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ (ಜಿಬಿಎ) ಹಿನ್ನೆಲೆಯಲ್ಲಿ, ಕರ್ನಾಟಕದ ಕಮಲ ಪಾಳಯದಲ್ಲಿ ಭಾರಿ ಆಂತರಿಕ ಬದಲಾವಣೆಗಳ ಪರ್ವ ಆರಂಭವಾಗಿದೆ. ರಾಜ್ಯ ಬಿಜೆಪಿಗೆ ಹೊಸ ನಾಯಕತ್ವ ಹಾಗೂ ಸ್ಪಷ್ಟತೆ ನೀಡಲು ಮುಂದಾಗಿರುವ ರಾಷ್ಟ್ರೀಯ ಹೈಕಮಾಂಡ್, ನೂತನ ರಾಜ್ಯಾಧ್ಯಕ್ಷರ ಘೋಷಣೆಗೆ ಅಂತಿಮ ಹಂತದ ಪ್ರಕ್ರಿಯೆಗಳನ್ನು ಚುರುಕುಗೊಂಡಿದೆ.
ಬೆಂಗಳೂರಿನಲ್ಲಿ ಹೈಕಮಾಂಡ್ ನಾಯಕರ ರಹಸ್ಯ ಸಭೆ:
ಇದರ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ವೈಜಯಂತ್ ಪಾಂಡಾ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ‘ಜಗನ್ನಾಥ ಭವನ’ದಲ್ಲಿ ಆಯ್ದ ಪ್ರಮುಖ ಮುಖಂಡರ ತುರ್ತು ಸಭೆ ನಡೆಸಿದ್ದಾರೆ. ಮೊದಲು ಜಂಟಿ ಸಭೆ ನಡೆಸಿದ ಕೇಂದ್ರ ನಾಯಕರು, ತದನಂತರ ಹಿರಿಯ ಮುಖಂಡರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಒನ್-ಟು-ಒನ್ (One-to-One) ಮಾದರಿಯಲ್ಲಿ ಪ್ರತ್ಯೇಕವಾಗಿ ಹೊಸ ಅಧ್ಯಕ್ಷರ ಆಯ್ಕೆ ಕುರಿತು ರಹಸ್ಯ ಅಭಿಪ್ರಾಯ ಸಂಗ್ರಹಿಸಿದ್ದಾರೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಈಗಾಗಲೇ ರಾಜ್ಯ ಘಟನೆಯಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆ ಅಥವಾ ಮಹತ್ವದ ಬದಲಾವಣೆಯಾಗಲಿದೆ ಎಂಬ ಸ್ಪಷ್ಟ ಸುಳಿವು ನೀಡಿದ್ದಾರೆ. ಚುನಾವಣಾ ವರ್ಷ ಸಮೀಪಿಸುತ್ತಿರುವ ಹೊತ್ತಿನಲ್ಲಿ ಪಕ್ಷವನ್ನು ಮುನ್ನಡೆಸಲು ಸಮರ್ಥ, ಜಾತಿ ಸಮೀಕರಣಕ್ಕೆ ಹೊಂದಿಕೊಳ್ಳುವ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವ ಹೊಸ ಸಾರಥಿಯ ಹುಡುಕಾಟದಲ್ಲಿದೆ ಹೈಕಮಾಂಡ್. ಈ ಬೆಳವಣಿಗೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ.


