ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೊರವಲಯದ ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಮುನ್ನ ಬಾಲಕಿ ಬರೆದಿಟ್ಟಿರುವ ತುಳು ಭಾಷೆಯ ಡೆತ್ ನೋಟ್ನಲ್ಲಿ ತನಗಾದ ಭೀಕರ ವಂಚನೆಯ ಕಥೆಯನ್ನು ಬಿಚ್ಚಿಟ್ಟಿದ್ದಾಳೆ.
ಕಾಲೇಜಿನಿಂದ ಮನೆಗೆ ಬಂದ ಬಳಿಕ ವಿದ್ಯಾರ್ಥಿನಿ ಈ ನಿರ್ಧಾರ ಕೈಗೊಂಡಿದ್ದು, ಬಾಲಕಿಯ ಸಾವು ಹೆತ್ತವರಿಗೆ ಭಾರಿ ಆಘಾತ ನೀಡಿದೆ. ಆತ್ಮಹತ್ಯೆಗೆ ಮುನ್ನ ಬರೆದಿರುವ ಪತ್ರದಲ್ಲಿ, “ಅಮ್ಮಾ, ನಾನು ತಪ್ಪು ಮಾಡಿದ್ದೇನೆ… ನನ್ನನ್ನು ಕ್ಷಮಿಸು. ನನಗೆ ಇನ್ನು ಬದುಕಲು ಸಾಧ್ಯವಿಲ್ಲ” ಎಂದು ಮುಗ್ಧ ಬಾಲಕಿ ಹೆತ್ತವರಲ್ಲಿ ಕ್ಷಮೆ ಕೋರಿದ್ದಾಳೆ.

ಮುಂದುವರಿದು, ಬಂಟ್ವಾಳ ಮೂಲದ ಅನೀಶ್ ಪೂಜಾರಿ ಎಂಬ ಯುವಕನ ವಿರುದ್ಧ ಆಕೆ ಗಂಭೀರ ಆರೋಪ ಮಾಡಿದ್ದಾಳೆ. ಪ್ರೀತಿಯ ನೆಪದಲ್ಲಿ ತನ್ನನ್ನು ನಂಬಿಸಿ ಗರ್ಭಿಣಿಯಾಗಿಸಿ, ನಂತರ ಆತ ಕೈಬಿಟ್ಟಿದ್ದಾನೆ ಎಂದು ಡೆತ್ ನೋಟ್ನಲ್ಲಿ ಉಲ್ಲೇಖಿಸಲಾಗಿದೆ. “ನನಗೆ ಹಿಂದೂ ಸಂಘಟನೆಯವರು ಸಹಾಯ ಮಾಡಲಿಲ್ಲ. ನನಗೆ ಮೋಸ ಮಾಡಿದವನು ಆರಾಮವಾಗಿದ್ದಾನೆ. ಆದರೆ ನನ್ನ ರೀತಿಯಲ್ಲಿ ಮತ್ತೊಬ್ಬ ಹುಡುಗಿಯ ಜೀವನ ಹಾಳಾಗಬಾರದು” ಎಂಬ ನೋವಿನ ಮಾತುಗಳನ್ನು ಬಾಲಕಿ ಪತ್ರದಲ್ಲಿ ಬರೆದಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ:ಚಲಿಸುವ ರೈಲಿನಲ್ಲಿ ಗರ್ಭಿಣಿಗೆ ಹೆರಿಗೆ: ಬಿ.ಸಿ. ರೋಡ್ ರೈಲು ನಿಲ್ದಾಣದಲ್ಲಿ ಗಂಡು ಮಗುವಿನ ಜನನ
ಮುಗ್ಧ ಬಾಲಕಿಯ ಸಾವಿಗೆ ಕಾರಣನಾದ ಕಾಮುಕನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸದ್ಯ ಮೃತ ಅಪ್ರಾಪ್ತೆಯ ತಂದೆ ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಟ್ವಾಳದ ಅನೀಶ್ ಪೂಜಾರಿ ವಿರುದ್ಧ ಐಪಿಸಿ ಹಾಗೂ ಕಟ್ಟುನಿಟ್ಟಿನ ಪೋಕ್ಸೋ (POCSO) ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

