ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ!: ಈಗಾಗಲೇ ಬಸ್ ಪಾಸ್‌ಗೆ ಹಣ ಕಟ್ಟಿದವರಿಗೆ ಶೀಘ್ರದಲ್ಲೇ ಹಣ ರಿಫಂಡ್; ಅರ್ಜಿ ಸಲ್ಲಿಕೆ ಹೇಗೆ?

ಬೆಂಗಳೂರು: ಕರ್ನಾಟಕದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಜಂಟಿಯಾಗಿ ಅತ್ಯಂತ ಮಹತ್ವದ ಮತ್ತು ಆಕರ್ಷಕ ಸಿಹಿಸುದ್ದಿಯೊಂದನ್ನು ನೀಡಿವೆ. ಶಾಲಾ-ಕಾಲೇಜುಗಳು ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (Free Bus Pass) ವಿತರಿಸಲು ಆದೇಶ ಹೊರಡಿಸಿದ್ದ ಸಾರಿಗೆ ಇಲಾಖೆ, ಇದೀಗ ಈಗಾಗಲೇ ಹಣ ನೀಡಿ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಹಣವನ್ನು ಮರುಪಾವತಿ (Refund) ಮಾಡಲು ಅಧಿಕೃತ ಆದೇಶ ಹೊರಡಿಸಿದೆ.

ರಾಜ್ಯದ ಪ್ರಮುಖ ನಾಲ್ಕೂ ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ (KSRTC), ಬಿಎಂಟಿಸಿ (BMTC), ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು (KKRTC) ತಮ್ಮ ವ್ಯಾಪ್ತಿಯಲ್ಲಿ ಹಣ ವಾಪಸ್ ಪಡೆಯಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ಕಲ್ಪಿಸಿಕೊಟ್ಟಿವೆ.

Advertisement

ಇದನ್ನೂ ಓದಿ:ಇನ್ಮುಂದೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪಾಸ್’; ಈಗಾಗಲೇ ಕಟ್ಟಿರುವ ಹಣ ರಿಫಂಡ್!: ನಾಲ್ಕು ಸಾರಿಗೆ ನಿಗಮಗಳಿಗೆ 86.86 ಕೋಟಿ ರೂ. ಬಿಡುಗಡೆ

ಸೇವಾಸಿಂಧು ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಕೆ ಕಡ್ಡಾಯ:

ಬಸ್ ಪಾಸ್ ವಿತರಣೆಗಾಗಿ ಹಣ ಪಾವತಿಸಿರುವ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ಹಣವನ್ನು ಮರಳಿ ಪಡೆಯಲು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ಆರಂಭ: ವಿದ್ಯಾರ್ಥಿಗಳು ಸೇವಾಸಿಂಧು (Seva Sindhu) ಪೋರ್ಟಲ್ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬೇಕು.

ಹಣ ಮರುಪಾವತಿ ಅವಧಿ: ಸೇವಾಸಿಂಧು ಪೋರ್ಟಲ್‌ನಲ್ಲಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಕೇವಲ 7 ದಿನಗಳ ಒಳಗಾಗಿ ವಿದ್ಯಾರ್ಥಿಗಳ ಖಾತೆಗೆ ಹಣ ಮರುಪಾವತಿಯಾಗಲಿದೆ ಎಂದು ನಿಗಮಗಳು ಸ್ಪಷ್ಟಪಡಿಸಿವೆ.

ಯಾವುದೇ ವಿದ್ಯಾರ್ಥಿ ಮಧ್ಯವರ್ತಿಗಳ ಮೊರೆ ಹೋಗದೆ ನೇರವಾಗಿ ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವಂತೆ ಸಾರಿಗೆ ಇಲಾಖೆ ಜಾಗೃತಿ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *