ಸುಳ್ಯ: ನಗರ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾದ ರಸ್ತೆಯ ದುರಾವ್ಯಸ್ಥೆಯ ಕುರಿತು ಗಂಭೀರವಾಗಿ ಪರಿಗಣಿಸಿದ ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಳ್ಯ ನಗರ ವ್ಯಾಪ್ತಿಯ ಸರಕಾರಿ ಆಸ್ಪತ್ರೆ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾದ ರಸ್ತೆಯಲ್ಲಿ ವಿದ್ಯುತ್ ಕಂಬವನ್ನು ತೆರವುಗೊಳಿಸದೆ ಕಾಮಗಾರಿ ನಡೆಸಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಈ ರಸ್ತೆಯನ್ನು ಖಾಸಗಿ ವಸತಿ ಬಡಾವಣೆಯನ್ನು ನಿರ್ಮಿಸುವ ಸಂಸ್ಥೆಯು ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ನಿರ್ಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳಿಗೆ ಶೀಘ್ರವಾಗಿ ತೆರವುಗೊಳಿಸಿ ರಸ್ತೆಸಂಚಾರಕ್ಕೆ ಮುಕ್ತವಾಗುವಂತೆ ಅನುವುಮಾಡಿಕೊಡಬೇಕು. ತಪ್ಪಿದ್ದಲಿ ಸಂಸ್ಥೆಯ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಶಾಸಕರು ತಾಕೀತು ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ ಭಾಗೀರಥಿ, ಈ ರಸ್ತೆಯನ್ನು ತಾಲೂಕು, ಜಿಲ್ಲಾ ಪಂಚಾಯತ್, ಶಾಸಕರ ನಿಧಿ, ನಗರ ಪಂಚಾಯತ್ನಿಂದ ಮಾಡಿರುವಂತಹ ರಸ್ತೆಯಲ್ಲ. ಇಲ್ಲಿನ ಲೇಔಟ್ನವರು ಅನುಮತಿ ಪಡೆಯದೆ ಮಾಡಿದ ರಸ್ತೆ ಇದಾಗಿದೆ. ಮೆಸ್ಕಾಂ ಹಾಗೂ ತಹಶೀಲ್ದಾರ್ ಅವರ ಗಮನಕ್ಕೆ ತಾರದೆ ರಸ್ತೆ ನಿರ್ಮಿಸಲಾಗಿದೆ ಎಂದರು.
ಸಾರ್ವಜನಿಕರು ಯಾವುದೇ ಅಡಚಣೆ ಇಲ್ಲದೆ ಸಂಚರಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸುವಂತೆ ಹಾಗೂ ಅನುಮತಿ ಪಡೆಯದೇ ರಸ್ತೆ ನಿರ್ಮಿಸಿದ್ದರೆ ಲೇಔಟ್ನವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.
ಈ ವೇಳೆ ನಗರಪಂಚಾಯತ್ ಮಾಜಿ ಅಧ್ಯಕ್ಷರಾದ ವಿನಯ್ ಕಂದಡ್ಕ, ಶಶಿಕಲಾ ನೀರಬಿದಿರೆ, ಮಾಜಿ ಸದಸ್ಯೆ ಕಿಶೋರಿ ಶೆಟ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ ಕಂಜಿಪಿಲಿ, ಪ್ರಮುಖರಾದ ಜಿನ್ನಪ್ಪ ಪೂಜಾರಿ, ಪ್ರಸಾದ ಕಾಟೂರು ಇದ್ದರು.

